Posts

ಗಣೇಶ ರೂಪಕಲ್ಪನ ಕಾವ್ಯ

Image
ಮೂಢಮನವನೇಳಿಸಿ ಜ್ಞಾನವೃದ್ಧಿಯ ಮಾಡುಬಾ ದಿವ್ಯಮೂರ್ತಿ ಬುದ್ಧೀಶನೇ ಜೈ ಜೈ ಗಣೇಶ ಪಾಹಿಮಾಂ ||ಪ|| ಗಕಾರ ರೂಪ ಪೂರ್ವದಿ ಪಾದ ಪೂಜೆಯ ಮಾಡುವೆ ಕಾಲಾತೀತದ ಕಾಲ್ಗಳೋ ಜೈ ಜೈ ಗಣೇಶ ಪಾಹಿಮಾಂ ||೧|| ಗರ್ವ ಬಂಡಾಟ ಗೀಳೇಕೆ ಭೂಮಿಯಲೊಂದು ಪಾದವು ಪರತತ್ವದೊಳೇ ಮುಕ್ತಿ ಜೈ ಜೈ ಗಣೇಶ ಪಾಹಿಮಾಂ ||೨|| ಪಾದವಿನ್ನೊಂದೆತ್ತರದಿ ಕ್ಷರಲೌಕಿಕ ಬೇಡವೋ ಬ್ರಹ್ಮವಕ್ಷಯ ಕಾಣಿಸೋ ಜೈ ಜೈ ಗಣೇಶ ಪಾಹಿಮಾಂ ||೩|| ಪಾದ ಪಾದದ ರೂಪವು ಕ್ಷಯಾಕ್ಷಯದ ಅಂತರ ಪಾದ ತಿಳಿಯೆ ಸ್ವರ್ಗವು ಜೈ ಜೈ ಗಣೇಶ ಪಾಹಿಮಾಂ ||೪|| ಮಧ್ಯಮವು ಅಕಾರವು ಭವ್ಯ ಬ್ರಹ್ಮಾಂಡ ರೂಪವು ಅನಂತಾಖಂಡ ಸಾದೃಶ್ಯ ಜೈ ಜೈ ಗಣೇಶ ಪಾಹಿಮಾಂ ||೫|| ನಾಗಪಾಶದಿ ಬಂಧಿತ ವಿಶ್ವಾಶ್ವಾಕ್ಷದೆಲ್ಲ ಕಣ ಪಾಶದಾಚೆ ಮುಕ್ತಿಲೋಕ ಜೈ ಜೈ ಗಣೇಶ ಪಾಹಿಮಾಂ ||೬|| ಭವದಿಚ್ಛೆಯೆಲ್ಲವಿದು ಭಕ್ಷ್ಯಭೋಜ್ಯ ಲಡ್ಡುಗಳು ವಾಂಛೆ ತ್ಯಜಿಸೆ ಬ್ರಹ್ಮೈಕ್ಯ ಜೈ ಜೈ ಗಣೇಶ ಪಾಹಿಮಾಂ ||೭|| ಚಿತ್ತ ಮರ್ಕಟ ಬಂಧಕೆ ಪರಶು ಪಾಶದಂಕುಶ ದಿವ್ಯ ಹೃದಯ ತುಂಬಿಕೋ ಜೈ ಜೈ ಗಣೇಶ ಪಾಹಿಮಾಂ ||೮|| ಭವ್ಯ ರೂಪವ ನೋಡಿದೆ ಮಿಥ್ಯ ಮೋಹವೆಲ್ಲ ಕಳೆ ಭವಸಾಗರ ದಾಟಿಸೋ ಜೈ ಜೈ ಗಣೇಶ ಪಾಹಿಮಾಂ ||೯|| ಅನುಸ್ವಾರಾಂತ ರೂಪವು ಶೂನ್ಯದೊಳು ಸರ್ವೈಕವೋ ಋಣ ಧನದ ಹಂಗೇಕೋ ಜೈ ಜೈ ಗಣೇಶ ಪಾಹಿಮಾಂ ||೧೦|| ಆರೋಗ್ಯವದು ಭಾಗ್ಯವೋ ನೆಮ್ಮದಿ ಮನ ಸಂತಸ ಆನೆ ಮುಖದ ಸಂದೇಶ ಜೈ ಜೈ ಗಣೇಶ ಪಾಹಿಮಾಂ ||೧೧|| ಶೂರ್ಪಕರ್ಣದಿ ಕೇಳಿಕೋ ತೀಕ್ಷ್ಣ ನೇತ್ರದಿ ನೋ

ನಮೋ ರಾಘವೇಂದ್ರ

Image
ಹಸಿದು ಬಂದ ಕಂದಗೇ ಹಾಲೂಡಿಸುವ ನಂದನ ಸಾರ್ವಭೌಮ ಯತೀಶನೇ ರಾಘವೇಂದ್ರ ನಮೋ ನಮೋ ||ಪ|| ಬಾಲಮಾನಸ ಮಂದಿರ ತುಂಬಿಹೆ ನೀನು ಚಂದಿರ ತಂಪೆರೆಯುತ ಕಾಯು ನೀ ರಾಘವೇಂದ್ರ ನಮೋ ನಮೋ ||೧|| ತುಂಗೆ ತೀರದಿ ನಿಂತಿಹೆ ಭಕ್ತ ಭಕ್ತರ ಪಾಲಿಸೆ ಮಂತ್ರ ಗಾನದಿ ಪ್ರಸನ್ನಾ ರಾಘವೇಂದ್ರ ನಮೋ ನಮೋ ||೨|| ಭಕ್ತಿಯೊಲ್ಮೆಯ ಪೂಜೆಗೇ ಶುದ್ಧ ಮಾನಸ ಧ್ಯಾನಕೇ ಒಲಿಯೋ ಗುರು ಶ್ರೇಷ್ಠನೇ ರಾಘವೇಂದ್ರ ನಮೋ ನಮೋ ||೩|| ಫಲ ವಾಂಛೆಯೆಲ್ಲವನು ಇಲ್ಲವೆನ್ನದೆ ನೀಡುವಾ ಮಂತ್ರಾಲಯ ಪುರಾಧೀಶ ರಾಘವೇಂದ್ರ ನಮೋ ನಮೋ ||೪|| ಚಂದನವು ನಿನ್ನಾನಾಮ ನಂದನವು ನಿನ್ನಾನೆಲ ಬೃಂದಾವನದಿ ಐತಿಹ್ಯ ರಾಘವೇಂದ್ರ ನಮೋ ನಮೋ ||೫|| ವೃಂದ ವೃಂದದಿ ಭಕ್ತರು ದರ್ಶನ ಬೇಡಿದಾಗಲೇ ಕ್ಷಣಮಾತ್ರದಿ ಪ್ರತ್ಯಕ್ಷ ರಾಘವೇಂದ್ರ ನಮೋ ನಮೋ ||೬|| ಹೃನ್ಮನವು ಮಲ್ಲಿಗೆಯು ಕಣ್ಣೊಲ್ಮೆಯಾ ಮಹಾನದಿ ಧ್ವನಿಯು ಮಾಣಿಕ್ಯಮಣಿ ರಾಘವೇಂದ್ರ ನಮೋ ನಮೋ ||೭|| ಮಧುರ ಮಾತಿನಿಂದಲೇ ಮನ್ಮಂದಿರ ಗೆಲ್ಲುವೆಯೋ ಶರಣೆಂದೊಡೆ ಬಾರಯ್ಯಾ ರಾಘವೇಂದ್ರ ನಮೋ ನಮೋ ||೮|| ಭಾವ ಭಾವದಲ್ಲಿ ರಾಮ ರಾಮ ನಾಮದಲ್ಲೀಜಗ ರಾಮ ದರ್ಶನ ಮಾಡಿಸೋ ರಾಘವೇಂದ್ರ ನಮೋ ನಮೋ ||೯|| ಗುಣಾಧೀಶ ನಮೋ ನಮೋ ಕೃಪಾನಿಧಿ ನಮೋ ನಮೋ ಭವ್ಯಕೃತೇ ನಮೋ ನಮೋ ರಾಘವೇಂದ್ರ ನಮೋ ನಮೋ ||೧೦|| ಪಯಣಿಗನ ಭಾವದೀ ಕಾವ್ಯದಿಂದ ನಮೋ ನಮೋ ಅಕ್ಷರದಿ ನಮೋ ನಮೋ ರಾಘವೇಂದ್ರ ನಮೋ ನಮೋ ||೧೧|| - ಪ್ರಕಾಶ ಪಯಣಿಗ

ಶಂಕರಾಚಾರ್ಯ ಅಕ್ಷರ ವಂದನಂ

Image
ಅಷ್ಟಕಾದಿ ಅಪಾರವಂ ಅಕಲಂಕಿತ ಸ್ತವವಂ ಅಖಂಡದಿಂ ಅರ್ಪಿಸಿದ ಅಜೇಯ ಗುರು ಶಂಕರಂ ||೧|| ಆಚಾರ್ಯೋತ್ತಮ ಆಕಲ್ಪಂ ಆದ್ಯದ್ವೈತದ ಆಕರಂ ಆತ್ಮವೇ ಆದಿಯೆಂದನುಂ ಆ ಆದಿಗುರು ಶಂಕರಂ ||೨|| ಇಂದ್ರಛಾಪ ಇಹಾಲೋಕ ಇಂಥಾಮೋಹ ಇಲ್ಯಾಕೆನೆ ಇಷುಧಿಯಿಂ ಇಷ್ಟಕಾವ್ಯಂ ಇತ್ತನಾಗುರು ಶಂಕರಂ ||೩|| ಈಶ ಈಶಾನಿ ಈರ್ವರೇ ಈಸೃಷ್ಟಿಗಾದಿ ಈಜಗಂ ಈಪ್ಸೆ ಈಷಣವೇಕೆಂದಂ ಈ ಜಗದ್ಗುರು ಶಂಕರಂ ||೪|| ಉತ್ಕಂಠಿತ ಉಜ್ವಲನುಂ ಉರ್ವಿಯನು ಉದ್ಧರಿಪಂ ಉಕ್ಷಕೇತ ಉಮಾಶಿವಂ ಉಪಾಸ್ಯ ಗುರು ಶಂಕರಂ ||೫|| ಊನಮಾನವನೂನವಂ ಊರ್ಜದಿಂಗಳೆದಾಗನೀ ಊರೂರಜನಮಾನದಿಂ ಊರ್ಜಸ್ವಿ ಗುರು ಶಂಕರಂ ||೬|| ಋಕ್ಕು ಋಕ್ಕಿನ ಭಾಷ್ಯವಂ ಋಷಿಗಳುಂ ಋತ್ವಿಜರುಂ ಋತುವೆಲ್ಲದಿ ಭಜಿಸೆ ಋಣಿನಾನ್ಗುರು ಶಂಕರಂ ||೭|| ಎಚ್ಚಕನೆ ಎಚ್ಚರಿಸಿಂ ಎಮ್ಮನವಂ ಎತ್ತರಿಸಿ ಎನಸುಂ ನೀ ಎರ್ದೆಲಾಡೋ ಎಂದುಂ ನೀ ಗುರು ಶಂಕರಂ ||೮|| ಏಸುಜನ್ಮವ ಏರಿಯುಂ ಏರಾಟದಕರ್ಮವಿದುಂ ಏಳ್ ಏಳೆಂದು ಏಳಿಸೆ ಏಕೈಕ್ಯಂ ಗುರು ಶಂಕರಂ ||೯|| ಐಸಿರಿ ಐಹಿಕೈಲಿದುಂ ಐಷಾರಾಮವಿದೇಕಿನ್ನುಂ ಐಚ್ಛೆಗಳೆಯೆ ಐಕವೋ ಐತಿಹ್ಯ ಗುರು ಶಂಕರಂ ||೧೦|| ಒಳ್ಳಿತೋಪ್ಪಿತವೋಲ್ಮೆಯಿಂ ಒಚ್ಚಯದಿಂ ಒಟ್ಟಾಗಲ್ ಒಳಗಣ್ತೆರೆದೋಳಗೆಂ ಒಳ್ಗಂಪು ಗುರು ಶಂಕರಂ ||೧೧|| ಓಂಕಾರಬೀಜ ಓಜಸ್ಸುಂ ಓಘವೋವಳಿಸೋಕುಳಿಂ ಓಂಕಾರಮೂರುತೀಶನಾ ಓಜಸ್ವಿ ಗುರು ಶಂಕರಂ ||೧೨|| ಔಚಿತ್ಯ ಧ್ಯಾನ ಮಾಳ್ಪೊಡೆ ಔನ್ನತ್ಯವು ಸಲೀಲವುಂ ಔದ್ಧತ್ಯಂಬಿಡೆ ಓಂ ತತ್ವಂ ಔಷಧಿ ಗುರು ಶಂಕರಂ ||೧೩|| ಅಂ

ಮುಕ್ತಿರೂಪ ಅಯ್ಯಪ್ಪ

Image
ಪರಬ್ರಹ್ಮ ತತ್ವ ಸಾಕ್ಷಾತ್ಕಾರದ ಬೆಳಕು ನೀಡೋ ಲೌಕಿಕದ ಮೋಹ ಕಳೆವ ಗುರುವೇ ಅಯ್ಯಪ್ಪ ||ಪ|| ಶ್ರೀಹರಿಯು ಚೆಂದದಲಿ ಮೋಹಿನಿಯಾಗೆ ಮದನಾಂತಕ ಹರನು ಮೋಹಿತನಾಗಿ ಯೋಗಶಕ್ತಿಗಳೆರಡು ಕೂಡಿ ಒಂದಾಗಿ ರೂಪ ತಳೆದ ಮಹಾಶಕ್ತಿ ಸ್ವಾಮಿ ಅಯ್ಯಪ್ಪ ||೧|| ಯೋಗದಲಿ ಯೋಗಿ ಯೋಗೇಶ್ವರನು ಯೋಗನಿದಿರೆಯಲಿ ಹರಿ ಯೋಗಮಾಯೆ ಯೋಗ ಯೋಗಗಳು ಯೋಗದಲಿ ಏಕವಾಗೆ ಜನಿಸಿದ ಮಹಾಯೋಗಿಯೇ ಸ್ವಾಮಿ ಅಯ್ಯಪ್ಪ ||೨|| ಸರ್ವಗುಣಸಂಪನ್ನ ಭಾವುಕನು ಹರಿಯು ತಪೋನಿರತ ಭಾವಾತೀತನೂ ಹರನು ಭಾವ ಗುಣಗಳೆಲ್ಲವು ತಪದಲೊಂದಾಗಿ ಗುಣಭಾವದಾಚೆಯ ಪರತತ್ವ ನೀನೇ ಅಯ್ಯಪ್ಪ ||೩|| ಗುಣಾವಗುಣಗಳೆಲ್ಲವ ಮನದೊಳಿಟ್ಚು ಮನುಜಕುಲ ತಾ ನಿರ್ಭಾವುಕತೆಯ ಬಿಟ್ಟು ತಾನೆಂಬ ಅಹಂಭಾವದೊಳು ಬೀಗಿರಲು ಕಣ್ತೆರೆದು ಅರಿವ ಬೆಳಕು ಮೂಡಿಸೋ ಅಯ್ಯಪ್ಪ ||೪|| ಭೂಮಿ ಭೂಮಿಯನೆ ಸೆಳೆದು ಕೂಡಿ ತುಂಡು ಇಳೆಗೆ ಬಂಧ ಮುರಿದು ಕಾಡಿ ಸೌಧ ಕಟ್ಟಿ ಬಂಧಿಯಾಗಿಕೊಂಬ ಜನಕೆ ಭೂಮಿ ಉಸಿರ ನಂಟು ಕಾಣಿಸೋ ಅಯ್ಯಪ್ಪ ||೫|| ಬೆಳ್ಳಿ ಬಂಗಾರ ವೈಢೂರ್ಯ ರಾಶಿ ಸಂಪದವ ಶೇಖರಿಪ ಮನದ ಖುಷಿ ಮರುಳು ಚಿತ್ತದಲಿ ಅರಿವು ಮೂಡಿಸೋ ಬಕುತಿ ಸಂಪದ ಅನಂತವದು ಅಯ್ಯಪ್ಪ ||೬|| ಮೋಹ ಮೋಹವೆಲ್ಲ ಕ್ಷಣಿಕವೋ ಬಂಧ ಸಂಬಂಧವೆಲ್ಲ ಮರುಳೋ ಮೋಹ ಬಂಧದ ಮರುಳ ಕಳೆದು ಮನುಜ ಮನಕೆ ಬೆಳಕಾಗೋ ಅಯ್ಯಪ್ಪ ||೭|| ಬಂಧ ಮೋಹ ಪಾಶ ಕಳೆದು ಇಹದ ವಾಂಛೆಗಳೆಲ್ಲ ಅಳಿದು ಶರಣು ಶರಣೆನುತಲಿ ಪದಕೆರಗೆ ಕೈಲಾಸ ವೈಕುಂಠಕೆ ಒಯ್ಯೋ ಅಯ್ಯಪ್ಪ ||೮|| ಹರಿಹರ ಸುತ ಮಹಾಶಾಸ್ತ್ರನೇ

ಜಯ ಜಯತು ಸುಬ್ರಹ್ಮಣ್ಯ

Image
ನೆಲವು ಬರಡಾಗಿದೆ ನೀನಿಲ್ಲದೇ ದೇವಸೇನಾಪತಿ ಜಲನಿಧಿಯ ಚಿಲುಮೆಯ ಹರಿಸೋ ಶ್ರೀವಲ್ಲಿನಾಥ ||ಪ|| ತಾರಕನ ತಾರಕದ ಅಹಂಕಾರದುರಿಗೆ ಲೋಕ ಲೋಕವೆಲ್ಲ ಬಸುಮವಾಗೆ ಶಿವಶಿವೆಗೆ ಗಂಗೆಯೊಡಲಲಿ ಸುತನಾಗೆ ತಾರಕಾಂತಕನಾಗಿ ಲೋಕ ಬೆಳಗಿದೆ ವಲ್ಲೀಶ ||೧|| ಸೊರಗಿದ್ದ ಕೃತ್ತಿಕೆಯರೆದೆಯಲಿ ಒಲುಮೆಯುಕ್ಕಿ ಪಾಲ್ಗಡಲು ಹರಿಯೆ ಅಮೃತವ ಕುಡಿದಾರು ಮುಖದಲಿ ತಾಯ್ತನಕೆ ಹೊಳಹಾದೆ ನೀ ಕಾರ್ತಿಕೇಯ ||೨|| ಅಸುರರ ಅಟ್ಟಹಾಸಕೆ ಮಣಿದು ಸುರಸೇನೆ ಬಲಹೀನವಾಗಿರಲು ನಾಯಕನು ನೀನಾಗಿ ಛಲದಿ ಮೆರೆದು ಶೂರತನದ ಕಿಚ್ಚೇಳಿಸಿದೆ ಸುರಸೈನ್ಯನಾಥ ||೩|| ದೇವಸೇನಾ ಶ್ರೀವಲ್ಲಿಯ ಕರಪಿಡಿದು ಪ್ರೇಮಸಾಗರದಿ ಮಿಂದು ದಣಿದು ಬಾಳಾಯ್ತು ಹಸಿರಸಿರ ನಂದನವನ ನೀನಿರಲು ದೇವಾಸೇನಾಪತಿ ಶ್ರೀವಲ್ಲಿನಾಥ ||೪|| ಮನ ಮನ ಬನದ ಹಸಿರುಡುಗಿ ಕಲ್ಲು ಕಲ್ಲಕಟ್ಟೆಯಲಿ ಬನವಡಗಿ ನೀನಿಲ್ಲದೇ ಎನಿತು ಪೂಜಿಸಿ ಫಲವೇನು ಮನ ಬನದಿ ಚಿಗುರು ಮೂಡಿಸೋ ಕುಮಾರ ||೫|| ಚಿತ್ತ ಚಿತ್ತವಿದು ಜ್ಞಾನದಾಹದ ಹುತ್ತ ಹುತ್ತವೊಡೆದು ಕಲ್ಲುಕಡಿದು ಶಿಲೆಯನಿಡೆ ಹಾಲ ಹೊಳೆ ಹರಿಸುವ ಮೂಢಮನಕೆ ಜ್ಞಾನನಿಧಿಯ ಬೆಳಕ ತೋರೋ ವೇದನಿಧಿ ||೬|| ಮನೋಬುದ್ಧಿಗಳೆರಡು ಜೋಡೆತ್ತು ನೋಡು ಚೇತನದ ಹೊಲವನು ಶ್ರದ್ಧೆಯಲಿ ಹೂಡು ಬಕುತಿಯೋಣಿಯಲಿ ಭಾವ ಜಲವ ಸುರಿಯೆ ಫಲವಾಗಿ ಹೊನ್ನ ಬೆಳೆ ನೀಡೋ ಅನಂತಾನಂತ ||೭|| ಸ್ಕಂದನೂ ನೀನು ಪಾರ್ವತೀಕಂದನೇ ಶರಣು ಗುಹ ಷಣ್ಮುಖ ಮಯೂರವಾಹನನೇ ಶರಣು ಕಲಾಧರ ಮಾಯಾಧರ ಶಕ್ತಿಧರನೇ ಶರಣು ಶರಣರನು ಪೊರೆಯೋ ಭಕ್ತವ

ದರುಶನವ ನೀಡು ರಾಜರಾಜೇಶ್ವರಿ

Image
ಚೇತನಕೆ ಚೇತನವ ನೀಡಿ ಮಾಯವಾದೆಯಮ್ಮ ದರುಶನವ ನೀಡೆನಗೆ ರಾಜರಾಜೇಶ್ವರೀ ಅಮ್ಮ ||ಪ|| ಮಾಯದಲಿ ನೀ ಆದಿಮಾಯೆ ಮಾಯಾಲೋಕವ ಸೃಜಿಸಿದ ಮಾಯೆ ಯೋಗನಿದಿರೆಯ ಕಮಲನಾಭನಲಿ ಮಾಯೆಯಾಗಿ ಲೀನಳಾದೆಯಮ್ಮ ||೧|| ಕುಡಿ ನೋಟದ ಕಿಡಿ ಜ್ವಾಲೆಗೆ ದುರುಳರೆಲ್ಲರ ದಹ ದಹಿಸಿ ಲಯಹರನ ಕೆಂಡ ನಯನದಲಿ ಕೆಂಡವಾಗಿ ಲೀನಳಾದೆಯಮ್ಮ ||೨|| ಮನದ ಸಂಕಲ್ಪ ಮಾತ್ರಕೇ ಲೀಲೆಯಾಡುವ ಜಗನ್ಮಾತೃಕೇ ಜೀವ ಸೃಜಿಪ ಬ್ರಹ್ಮ ಮಾನಸದಿ ಮನವಾಗಿ ಲೀನಳಾದೆಯಮ್ಮ ||೩|| ಅಸುರಾರಿ ಹರಿಯ ಚಕ್ರದಲಿ ಪ್ರಲಯಾಂತಕ ಹರನ ಶೂಲದಲಿ ಚತುರ್ಮುಖ ಬ್ರಹ್ಮನ ದಂಡದಲಿ ವಜ್ರವಾಗಿ ಲೀನಳಾದೆಯಮ್ಮ ||೪|| ಸೌಂದರ್ಯದ ಖನಿ ತ್ರಿಪುರಸುಂದರಿ ನಿಧಿಗಳ ಗಣಿಯೆ ನೀನು ಶ್ರೀಲಲಿತೆ ಸಂಪದದೊಡತಿ ಲಕುಮಿಯ ಸಂಪದಕೆ ಭೂಷಣವಾಗಿ ಲೀನಳಾದೆಯಮ್ಮ ||೫|| ಕಾಳಿ ಚಾಮುಂಡಿ ಶಾಂಭವಿಯಾಗಿ ಶುಂಭಾದಿ ಅಸುರಗಣವ ತರಿದು ಶಂಭುವಿಗೆ ಸತಿಯಾಗಿ ಸತಿಯಲಿ ಕಾಲವಾಗಿ ಲೀನಳಾದೆಯಮ್ಮ ||೬|| ಲೋಕದಲಿ ಸರ್ವಜ್ಞಾನಿ ಜ್ಞಾನರೂಪಿಣಿ ಜಗಕೆ ವೇದಗಳ ಬೆಳಕಿತ್ತ ನಾರಾಯಣಿ ಜ್ಞಾನಮಾತೆ ವೀಣಾಪಾಣಿ ಶಾರದೆಯಲಿ ಜ್ಞಾನವಾಗಿ ಲೀನಳಾದೆಯಮ್ಮ ||೭|| ಗ್ರಹ ಗ್ರಹ ರವಿ ಚಂದ್ರರಲಿ ತಾರೆ ತಾರೆ ಬ್ರಹ್ಮಾಂಡದಲಿ ಸೆಳೆವ ಶಕ್ತಿ ತಾನಾಗಿ ಆದಿಶಕ್ತಿ ಕಾಂತವಾಗಿ ಲೀನಳಾದೆಯಮ್ಮ ||೮|| ಉರಿವ ನೇಸರನ ಕಿರಣದಲಿ ತಂಪೆರೆವ ಶಶಿಯ ತಿಂಗಳಲಿ ಪ್ರಭೆಯ ತೇಜೋಪುಂಜ ಆದಿಮಾಯೆ ಪ್ರಭೆಯಾಗಿ ಲೀನಳಾದೆಯಮ್ಮ ||೯|| ಬ್ರಹ್ಮಾಂಡವ್ಯಾಪಿನಿ ಜಗಜ್ಜನನಿ ನೆಲ ಜಲ ಗಿರಿ ಶಿಖರ ಗಗನದಲಿ

ಎಚ್ಚರಾಗೆನ್ನ ಕೃಷ್ಣ

Image
ಜ್ಞಾನನೇಸರನು ಹೊಂಗಿರಣ ಬೀರಿಹನು ನಿದ್ದೆ ತಿಳಿದೇಳು ತಡವೇಕೆ ಕೃಷ್ಣ ||ಪ|| ಮನೋ ಮಂದಿರದ ಹೊನ್ನ ಪಲ್ಲಂಗದಲಿ ಕಪಟ ನಿದಿರೆ ಸಾಕಿನ್ನು ಎಚ್ಚರಾಗೆನ್ನ ಕೃಷ್ಣ ||೧|| ಜಗವ ಪಾಲಿಪ ಹರಿಯೆ ಗುಡಿಯ ಬಾಗಿಲು ತೆರೆಯೆ ಸುಪ್ರಭಾತವು ನಿನಗೆ ಎಚ್ಚರಾಗೆನ್ನ ಕೃಷ್ಣ ||೨|| ವಿಷಮೊಲೆಯ ಕುಡಿದವನೆ ಬಕುತಿ ಸುಧೆಯ ನೀಡುವೆನು ಸ್ವೀಕರಿಸಿ ಹರಸಲು ಬೇಗ ಎಚ್ಚರಾಗೆನ್ನ ಕೃಷ್ಣ ||೩|| ಘೋರ ಮಳೆ ಸುರಿಯೆ ಗಿರಿಯ ಬೆರಳಲಿ ಎತ್ತಿ ಗೋಕುಲವ ಕಾಯಲು ಬೇಗ ಎಚ್ಚರಾಗೆನ್ನ ಕೃಷ್ಣ ||೪|| ಕಾಲಿಯನ ಗರ್ವ ಮುರಿದು ಯಮುನೆ ಒಡಲ ತೊಳೆದು ಜೀವ ಜಗದಿ ನಲಿಯೆ ಎಚ್ಚರಾಗೆನ್ನ ಕೃಷ್ಣ ||೫|| ಕಂಸಾದಿ ಅಸುರರ ಬಡಿದು ಹಿಂಸಾದಿಗಳೆಲ್ಲವ ಕಳೆದು ಮಂದಿರದ ದೀಪ ಬೆಳಗೆ ಎಚ್ಚರಾಗೆನ್ನ ಕೃಷ್ಣ ||೬|| ಗಡಿಗೆ ಗಡಿಗೆ ಬಕುತಿ ಹಾಲು ಮೊಸರು ಬೆಣ್ಣೆ ಪಾಲು ಮಾಡದೆ ಕೊಡುವೆ ಎಚ್ಚರಾಗೆನ್ನ ಕೃಷ್ಣ ||೭|| ಬಂಧನದ ಕತ್ತಲೆಯು ಕಂದನನು ಕಾಡಿಹುದು ಬೆಳಕ ಲೋಕ ತೋರಲು ಎಚ್ಚರಾಗೆನ್ನ ಕೃಷ್ಣ ||೮|| ನೀ ನೆಲೆಸಿಹ ಚೇತನ ಹಸಿರು ನಂದನವನ ಮುರಲಿ ಗಾನಕೆ ಕಾದಿಹುದು ಎಚ್ಚರಾಗೆನ್ನ ಕೃಷ್ಣ ||೯|| ಗೀತ ಗಾಯನ ಮಾಡಿ ಹೊಳೆಯೆ ಆತ್ಮ ಮಣಿ ವಿಶ್ವರೂಪದ ಲೀಲೆಯಾಡಲು ಎಚ್ಚರಾಗೆನ್ನ ಕೃಷ್ಣ ||೧೦|| ಕಾವ್ಯ ಕನ್ನಿಕೆಯ ಲಾಸ್ಯಕೆ ಪದ ಪುಂಜಗಳ ತಾಳಕೆ ಪಯಣಿಗನ ಅಕ್ಷರ ನಲಿಯೆ ಎಚ್ಚರಾಗೆನ್ನ ಕೃಷ್ಣ ||೧೧|| - ಪ್ರಕಾಶ ಪಯಣಿಗ

ತಲೆಬೈಲು ನರಸಿಂಹ

Image
ಶರಣ ಶರಣು ಹೇ ನರಸಿಂಹ ಭಕ್ತವತ್ಸಲ ತಲೆಬೈಲು ನರಸಿಂಹ ||ಪ|| ನಖ ತೀರ್ಥದಲಿ ಮಿಂದು ವನಕುಸುಮ ಮಾಲೆಯ ಧರಿಸಿ | ತಲೆಬೈಲು ಮಠದೊಳು ನಿಂದೆ ಮೊರೆಯೊ ಬಕುತರನು ಉದ್ಧರಿಸಿ ||೧|| ಇಹವ ಬೆಳಗಲು ನಿನಗಿಹುದು ಮಾತೆ ದುರ್ಗಾದೇವಿಯ ಮಡಿಲು | ಆಲಯದ ಕಾವಲಿಗಿಹುದು ಖಗರಾಜ ಗರುಡನ ಕರವು ||೨|| ಕಾಣಿಯೂರ ಯತಿ ಭಜಿಸಿ ತಪವ ಮಾಡಿದರು ಓ ನರಸಿಂಹ | ಧೂಪ ದೀಪಾರತಿ ಬೆಳಗಿ ಕೊಂಡಾಡಿದರೋ ದಿವ್ಯಸಿಂಹ ||೩|| ವಿಷ್ಣು ದೇವನ ಬಾಲಬಿಂಬದಿ ಮೈದಳೆದ ಉಗ್ರ ನರಸಿಂಹ | ಭವದ ಬವಣೆ ಕಳೆಯೋ ಪ್ರಹ್ಲಾದಪಾಲಕ ನರಸಿಂಹ ||೪|| ನರಹರಿಯ ಸೇವೆ ಮಾಡುತ ಧನ್ಯ ತಾನಾಗಿಹನು ಮುಖ್ಯಪ್ರಾಣ | ಹರಿಯ ಪವಮಾನ ಪೂಜೆಗೆ ಒಲಿದು ಹರಸಿ ಕಾಯ್ವನು ಹನುಮ ||೫|| ಗೋಪಾಲಕೃಷ್ಣನು ನೀನೇ ಪ್ರಭುವೇ ನೀ ವೆಂಕಟರಮಣ | ಚರಣ ಸೇವೆಯ ಭಾಗ್ಯವನು ಕರುಣಿಸು ಹೇ ಲಕ್ಷ್ಮೀರಮಣ ||೬|| ಕೆಂಡನಯನನೇ ಆದರೇನು ಹರಿಸುವೆಯೊ ಮಮತೆಯ ಕಡಲು | ಸಿಂಹವದನ ಕರಾಲನೂ ನೀನು ಬಕುತರಿಗೆ ಪ್ರೇಮದ ಒಡಲು ||೭|| ಭಾವ ಶುದ್ಧದಲಿ ಪದತಲಕೆ ಶರಣು ನಾನಾಗಿಹೆ ಅಗ್ನಿಲೋಚನ | ಕರುಣದಿಂದಲಿ ಕರಪಿಡಿದು ಎನ್ನ ಕಾಯೋ ಕಶಿಪುಶಾಪವಿಮೋಚನ ||೮|| ಪದ ಪದ ಸಾಲನು ಪೋಣಿಸಿ ಮಾಲೆ ಮಾಡಿಹೆನೋ ಯೋಗನಂದನ | ಕವಿತೆಯಿದ ತುಲಸೀ ಹಾರವೆಂದರಿತು ಪಯಣಿಗನ ಕಾಯೋ ದಿವ್ಯನಂದನ ||೯|| - ಪ್ರಕಾಶ ಪಯಣಿಗ

ಗಣೇಶ ತಾಂಡವ ಕಾವ್ಯ

Image
ಶಿವನ ಶೂಲದಿರಿತಕೊರಗಿ ಗಜನ ಶಿರವನಿರಿದು ತಂದು ಕೊರಳೊಳಿರಿಸುತಲೆದ್ದು ಬಂದ ಮುದ್ದು ಕಂದ ಗಣಪ | ಪಿರುದುದಾಕರ್ಣವೇನ್ ಚಂದ ಕಿರಿನಯನದಾನಂದ ನೀಳನಾಸಿಕವುದರ ಬ್ರಹ್ಮಾಂಡ ವಕ್ರತುಂಡ ಬೆನಕ ||೧|| ಜ್ವಲಿಸುತಾಖಂಡಮಂಡಲ ಕೆಡುಹಿ ಮೂಷಕನತಿಭಂಡ ಅಂಕ ಬಿಂಕ ಡೊಂಕ ಡಂಭ ಮುರಿದು ಗೆಲಿದ ವೀರ| ಋಷಿಜನ ಸುರರತಿಭಯ ಭಯ ವಿನಾಶಕ ನಲಿದ ಢಮ ಢಮ ಢಮರನಿನಾದ ಜಯ ಜಯಹೇ ರಿಪುಸಂಹಾರ ||೨|| ಗಣಪತಿ ಸೋದರ ಶರವಣ ಕೂಡಿ ವಾಹನವೇರಿ ಜಗಜಗದಗಲ ತಿರುಗೀಕ್ಷಿಪ ಪರಿಯದು ನೋಡಿ | ಶಿವಶಿವೆಗೆರಗಿ ತಾ ಕರಮುಗಿದು ಪದಪಿಡಿದು ಅಂಡ ಪಿಂಡ ಬ್ರಹ್ಮಾಂಡವೈ ನೀವೆಂದ ಮೊದಲ್ವಂದಿತ ||೩|| ಅರಿಗಳೆಂಟು ಮನುಜ ಮನದಿ ಮನೆಯ ಮಾಡಿ ಮೇಲೆ ಬಿದ್ದು ಮೇಧೆ ಮೆದ್ದು ಮತಿ ಮಂದವಾಗಿ | ಮಮ ಕಾಮ ಮದ ಮೋಹ ಮತ್ಸರ ಕ್ರೋಧ ಲೋಭಾಹಂಗಳರಿದು ತರಿದ ತಾಂಡವ ಗಣಪ || ೪ || ಬಂಡಿ ಬಂಡಿ ಬಂಡಿ ತಿಂಡಿ ಭಕ್ಷ್ಯ ಭೋಜ್ಯವೆಲ್ಲವುಂಡು ಗುಂಡುಗುಂಡುಗಾಗಿ ಎಡವಿಬಿದ್ದು ಧಿಗ್ಗನೆದ್ದ ಸುಂದರ | ಹಾವ ಪಿಡಿದು ಗಟ್ಟಿಯಾಗಿ ಉದರ ಬಿಗಿದು ಗೇಲಿಮಾಳ್ಪ ಚಂದ್ರಮಗೆ ಶಾಪವಿತ್ತು ನಶಿಪ ಪರಶುಪಾಶಧರ ||೫|| ಗಣ ಗಣವಗಣಿತ ಶಿವಗಣ ಭೂತಗಣಗಳ ಕೂಡಿ ಅಸುರರೆದೆ ಬಗೆದು ಮೂಜಗವ ಕಾಯ್ವ ಗಣನಾಯಕ | ಧಿಕ್ ತಕಿಟ ಧಿಕ್ ತಕಿಟ ಧಿಕ್ ತಕಿಟ ತಾಂಡವನಾದ ತಕ ತಕಿಟ ತಾನಲಿದ ಪರಶಿವನೊಲವ ವಿನಾಯಕ ||೬|| ಗಂಗೆಗೌರಿಯೊಲವ ಕಂದ ಚೆಂದ ಬೆನಕನ ವಿಧ ವಿಧ ಪರಿ ಪರಿ ಸುತಿಸಿರೊಲಿವಳಮ್ಮ ಲಕುಮಿ | ಜಪ ತಪ ಬಲು ಬಕುತಿಯಲಿ ಧೇನಿಸಿ ಬೇಡಿರೆ ಹರುಷ

ಮಾತಾಡು ಓ ಶಂಕರ

Image
ಮಾತು ಮರೆತೆ ಏಕೆ ಶಂಕರ ಬಕುತ ಮನದಿ ನಟನವಾಡಿ ನಿರಂತರ ||ಪ|| ಗಿರಿಜೆ ಕೂಡಿ ಸರಸವಾಡಿ ತಿರುಗಿ ಕುಳಿತು ತಪವ ಮಾಡಿ ಶಿವನೆ – ಮಾತು ಮರೆತೆ ||೧|| ಗಂಗೆ ಜಲದಲಿ ಮಿಂದು ಬಂದು ಚೆಂದದಿಂದಲಿ ರಮೆಯ ಕಂಡು ಹರನೆ – ಮಾತು ಮರೆತೆ ||೨|| ಶೂಲ ಸೆಳೆದು ಬಾಲ ಗಣಪನ ಶಿರವ ತರಿಯೆ ನೋವಿನಿಂದ – ಮಾತು ಮರೆತೆ ||೩|| ಶೂರ ಶರವಣ ಅರಿಯ ಬಡಿದು ಗೆಲುವ ಬೀರಿ ಹರುಷದಿಂದ – ಮಾತು ಮರೆತೆ ||೪|| ಮಸಣ ಬಸುಮ ಹಣೆಗೆ ಇರಿಸಿ ರುದಿರ ನಯನ ಮಾಲೆ ಧರಿಸಿ – ಮಾತು ಮರೆತೆ ||೫|| ನಂದಿ ವಾಹನ ಏರಿ ಕುಳಿತು ಲಯದ ಕೆಲಸಕೆ ಲೋಕ ತಿರುಗಿ – ಮಾತು ಮರೆತೆ ||೬|| ಹರಿ ತಾನೊಂದೆನುತ ಶೇಷಶಯನನಲಿ ಲೀನ ತಾನಾಗಿ ಬಿಂಕದಲಿ ಹರ – ಮಾತು ಮರೆತೆ ||೭|| ಹವನದುರಿಯಲಿ ದಹಿಸಿಕೊಂಡ ಸತಿಯ ನೆನೆದು ಕೂಗಿ ಕರೆದು – ಮಾತು ಮರೆತೆ ||೮|| ಮದನ ಬಾಣ ಎದೆಗೆ ಇರಿಯೆ ಕೆಂಡ ನಯನ ಬೀರಿ ಕೊಂದು – ಮಾತು ಮರೆತೆ ||೯|| ಹಿಮದ ಗಿರಿಯ ತುದಿಯಲೊಂದು ಮನೆಯ ಮಾಡಿ ಶೂಲಪಾಣಿ – ಮಾತು ಮರೆತೆ ||೧೦|| ಕೊರಳ ಮಾಲೆಗೆ ಹಾವ ಧರಿಸಿ ಶಶಿಯ ಕರೆದು ಶಿರದಲಿರಿಸಿ – ಮಾತು ಮರೆತೆ ||೧೧|| ಬೊಗಸೆ ಹಿಡಿದು ವಿಷವ ಕುಡಿದು ಜಗದ ಅಳಿವು ತಡೆದು ಹರನೆ – ಮಾತು ಮರೆತೆ ||೧೨|| ಪಾಪ ಕಳೆದು ಲೋಕ ಬೆಳಗಿ ಲಿಂಗವಾಗಿ ಜಂಭದಿಂದ – ಮಾತು ಮರೆತೆ ||೧೩|| ಗಾನ ಕೇಳಿ ಪದಪದಕೆ ನಲಿದು  ಒಲುಮೆಯಿಂದ ಪಯಣಿಗನ ಹರಸಿ – ಮಾತು ಮರೆತೆ ||೧೪|| - ಪ್ರಕಾಶ ಪಯಣಿಗ